ರುದ್ರೇಶ್ವರ ದೇವಾಲಯ ಎಂದೂ ಕರೆಯಲ್ಪಡುವ ರಾಮಪ್ಪ ದೇವಾಲಯವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ದೇವಾಲಯದಲ್ಲಿರುವ ಒಂದು ಶಾಸನವು ಇದನ್ನು ಕ್ರಿ.ಶ. 1213 ಕಾಲಮಾನದ್ದೆಂದು ನಿರ್ಧರಿಸುತ್ತದೆ. ಇದನ್ನು ಕಾಕತೀಯ ಸೇನಾಪತಿ ರೇಚರ್ಲಾ ರುದ್ರನು ಕಾಕತೀಯ ದೊರೆ ಗಣಪತಿ ದೇವನ ಅವಧಿಯಲ್ಲಿ ನಿರ್ಮಿಸಿದನೆಂದು ಹೇಳುತ್ತದೆ. ಇಲ್ಲಿ ರಾಮಲಿಂಗೇಶ್ವರ ದೇವರನ್ನು ಪೂಜಿಸಲಾಗುತ್ತದೆ. ಮಾರ್ಕೊ ಪೋಲೊ ಕಾಕತೀಯ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ ಈ ದೇವಸ್ಥಾನವನ್ನು "ದೇವಾಲಯಗಳ ನಕ್ಷತ್ರಪುಂಜದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ" ಎಂದು ಕರೆದನು ಎಂದು ಹೇಳಲಾಗಿದೆ. ರಾಮಪ್ಪ ದೇವಸ್ಥಾನವು ೬ ಅಡಿ ಎತ್ತರದ ನಕ್ಷತ್ರಾಕಾರದ ವೇದಿಕೆ ಮೇಲೆ ನಿಂತಿದೆ. ಗರ್ಭಗೃಹದ ಮುಂಭಾಗದಲ್ಲಿರುವ ಸಭಾಂಗಣವು ಹಲವಾರು ಕೆತ್ತಿದ ಕಂಬಗಳನ್ನು ಹೊಂದಿದ್ದು ಇವು ಬೆಳಕು ಮತ್ತು ಸ್ಥಳವನ್ನು ಅದ್ಭುತವಾಗಿ ಸಂಯೋಜಿಸುವ ಪರಿಣಾಮವನ್ನು ಸೃಷ್ಟಿಸುವಂತೆ ಇರಿಸಲ್ಪಟ್ಟಿವೆ. ಈ ದೇವಾಲಯವನ್ನು ನಿರ್ಮಿಸಿದ ಶಿಲ್ಪಿ ರಾಮಪ್ಪನ ಹೆಸರನ್ನೇ ಇದಕ್ಕೆ ಇಡಲಾಗಿದೆ ಮತ್ತು ಬಹುಶಃ ತನ್ನ ಕುಶಲಕರ್ಮಿಯ ಹೆಸರಿನಲ್ಲಿರುವ ಭಾರತದ ಏಕೈಕ ದೇವಸ್ಥಾನ ಇದಾಗಿದೆ. ಮುಖ್ಯ ರಚನೆಯು ಕೆಂಪು ಬಣ್ಣದ ಮರಳುಶಿಲೆಯಲ್ಲಿದೆ. ಆದರೆ ಹೊರಗೆ ಸುತ್ತಲೂ ಇರುವ ಕಂಬಗಳು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸಿಲಿಕಾಗಳಿಂದ ಸಮೃದ್ಧವಾಗಿರುವ ಕಪ್ಪು ಬಸಾಲ್ಟ್‌ನ ದೊಡ್ಡ ಚಾಚುಪೀಠಗಳನ್ನು ಹೊಂದಿವೆ. ಇವುಗಳನ್ನು ಪೌರಾಣಿಕ ಪ್ರಾಣಿಗಳು ಅಥವಾ ನರ್ತಕಿಯರು ಅಥವಾ ಸಂಗೀತಗಾರರಂತೆ ಕೆತ್ತಲಾಗಿದೆ, ಮತ್ತು "ಕಾಕತೀಯ ಕಲೆಯ ಮೇರುಕೃತಿಗಳಾಗಿವೆ". ಇವು ತಮ್ಮ ಸೂಕ್ಷ್ಮ ಕೆತ್ತನೆ, ಇಂದ್ರಿಯಾಸ್ವಾದ್ಯ ಭಂಗಿಗಳು ಮತ್ತು ಉದ್ದನೆಯ ದೇಹಗಳು ಮತ್ತು ಶಿರಗಳಿಗೆ ಗಮನಾರ್ಹವಾಗಿವೆ. 25 ಜುಲೈ 2021 ರಂದು, ದೇವಾಲಯವನ್ನು "ಕಾಕತೀಯ ರುದ್ರೇಶ್ವರ (ರಾಮಪ್ಪ) ದೇವಸ್ಥಾನ, ತೆಲಂಗಾಣ" ಎಂದು ವಿಶ್ವ ಪರಂಪರೆಯ ತಾಣವಾಗಿ ದಾಖಲಿಸಲಾಯಿತು. == ವಿವರಣೆ == ದೇವಾಲಯದ ಮೇಲ್ಛಾವಣಿಯನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಇವು ಎಷ್ಟು ಹಗುರವಾಗಿವೆ ಎಂದರೆ ಇವು ನೀರಿನ ಮೇಲೆ ತೇಲಲು ಸಾಧ್ಯವಾಗುತ್ತದೆ. ಮುಖ್ಯ ದೇವಾಲಯದ ಎರಡೂ ಬದಿಗಳಲ್ಲಿ ಎರಡು ಸಣ್ಣ ಶಿವ ದೇಗುಲಗಳಿವೆ. ಒಳಗೆ ಶಿವನ ದೇಗುಲಕ್ಕೆ ಎದುರಾಗಿ ಇರುವ ಅಗಾಧವಾದ ನಂದಿ ಉತ್ತಮ ಸ್ಥಿತಿಯಲ್ಲಿದೆ. ನಟರಾಜ ರಾಮಕೃಷ್ಣನು ಪೆರಿಣಿ ಶಿವತಾಂಡವ ನೃತ್ಯವನ್ನು ಈ ದೇವಾಲಯದಲ್ಲಿರುವ ಶಿಲ್ಪಗಳನ್ನು ನೋಡಿ ಪುನರುಜ್ಜೀವಿತಗೊಳಿಸಿದನು. ಮತ್ತೆ ಮತ್ತೆ ಸಂಭವಿಸಿದ ಯುದ್ಧಗಳು, ಲೂಟಿ ಮತ್ತು ಯುದ್ಧಗಳು ಹಾಗೂ ನೈಸರ್ಗಿಕ ವಿಪತ್ತುಗಳ ಸಮಯದಲ್ಲಾದ ನಾಶದ ನಂತರವೂ ದೇವಸ್ಥಾನವು ಹಾಗೆಯೇ ಉಳಿದಿದೆ. 17 ನೇ ಶತಮಾನದಲ್ಲಿ ಒಂದು ದೊಡ್ಡ ಭೂಕಂಪ ಸಂಭವಿಸಿದ್ದು ಅದು ಸ್ವಲ್ಪ ಹಾನಿಯನ್ನುಂಟುಮಾಡಿತು. ಇದು ಅಡಿಪಾಯ ಹಾಕುವ ಅದರ 'ಮರಳು ಪೆಟ್ಟಿಗೆ ತಂತ್ರ'ದ ಕಾರಣ ಭೂಕಂಪದಲ್ಲಿ ಉಳಿದುಕೊಂಡಿತು. ಅನೇಕ ಸಣ್ಣ ರಚನೆಗಳನ್ನು ನಿರ್ಲಕ್ಷಿಸಲಾಗಿತ್ತು ಮತ್ತು ಅವು ಪಾಳುಬಿದ್ದಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದೆ. ದೇವಾಲಯದ ಹೊರ ಗೋಡೆಯಲ್ಲಿನ ಮುಖ್ಯ ಪ್ರವೇಶ ದ್ವಾರ ಹಾಳಾಗಿದೆ. == ಛಾಯಾಂಕಣ == == ಉಲ್ಲೇಖಗಳು == === ಗ್ರಂಥಸೂಚಿ === . . . (1978). . (.). Kākatiyas . : . 252341228. == ಹೆಚ್ಚಿನ ಓದಿಗೆ == , , , 1: , , , 1989, ,